ನಟ ದರ್ಶನ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಆರೋಪ; ಓರ್ವ ಆರೋಪಿ ರಾಷ್ಟ್ರೀಯ ಪಕ್ಷದ ಐಟಿ ಸೆಲ್ ನಿರ್ವಾಹಕ! ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 17 ಮಂದಿಯ ಪೈಕಿ ಓರ್ವ ಆರೋಪಿ ರಾಷ್ಟ್ರೀಯ ಪಕ್ಷದ ಐಟಿ ಸೆಲ್ ನಿರ್ವಾಹಕನೆಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 17 ಮಂದಿಯ ಪೈಕಿ ಓರ್ವ ಆರೋಪಿ ರಾಷ್ಟ್ರೀಯ ಪಕ್ಷದ ಐಟಿ ಸೆಲ್ ನಿರ್ವಾಹಕನೆಂದು ತನಿಖೆಯಿಂದ ತಿಳಿದುಬಂದಿದೆ.ಪ್ರಕರಣದ 14ನೇ ಆರೋಪಿ ಪ್ರದುಶ್ ರಾಷ್ಟ್ರೀಯ ಪಕ್ಷವೊಂದರ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಮಾಜಿ ಸಚಿವರೊಬ್ಬರ ಆಪ್ತ ಸಹಾಯಕನೂ ಆಗಿದ್ದ, ಈತನಿಗಿದ್ದ ಸೈಬರ್ ಪರಿಣತಿಯಿಂದ ರೇಣುಕಾಸ್ವಾಮಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು ಎಂದು ತಿಳಿದುಬಂದಿದೆ.ಏತನ್ಮಧ್ಯೆ, ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ವರದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವರದಿಯಲ್ಲಿ ದೇಹದ ಮೇಲೆ 15 ಗಾಯಗಳಿತ್ತು ಎಂದು ತಿಳಿಸಲಾಗಿದೆ.ಮೃತ ವ್ಯಕ್ತಿಯ ಖಾಸಗಿ ಅಂಗಗಳಿಗೂ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿತ್ತು. ತೀವ್ರ ಹಲ್ಲೆಯ ನಂತರ ದೇಹದಲ್ಲಿ ರಕ್ತ ಹೆಪ್ಪುಗಟ್ಟಿರುವುದೂ ಕಂಡು ಕಂಡುಬಂದಿದೆ. ವ್ಯಕ್ತಿಯ ಮೇಲೆ ಮರದ ಹಲಗೆಗಳು, ಬೆಲ್ಟ್ ನಿಂದ ಹಲ್ಲೆ ನಡಸಲಾಗಿದೆ. ಮುಖ ಮತ್ತು ದೇಹದ ಇತರ ಭಾಗಗಳನ್ನು ನಾಯಿ ಕಚ್ಚಿರುವುದೂ ತಿಳಿದುಬಂದಿದೆ ಎಂದು ತಿಳಿಸಲಾಗಿದೆ.ನಿನ್ನೆಯಷ್ಟೇ ಆರೋಪಿ ಪವಿತ್ರಾ ಗೌಡಾಳ ಪುತ್ರಿ ತನ್ನ ತಾಯಿ ಮತ್ತು ದರ್ಶನ್ ಅವರನ್ನು ಭೇಟಿ ಮಾಡಲು ಮಹಿಳೆಯೊಂದಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು.ಇನ್ನು ಅಪಹರಿಸಿದ ಆರೋಪ ಹೊತ್ತಿರುವ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅವರನ್ನು ಪೊಲೀಸರು ಸ್ಥಳ ಮಹಜರುಗಾಗಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದರು.ಈ ನಡುವೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುಮ್ಮನನಹಳ್ಳಿ ಸೇತುವೆ ಬಳಿ ಇರುವ ಚರಂಡಿಗೆ ಶವವನ್ನು ಎಸೆಯುವಂತೆ ಆರೋಪಿಗಳಿಗೆ ಹೇಳಿದ್ದರು ಎಂಬ ಆರೋಪಗಳೂ ಕೂಡ ಕೇಳಿ ಬರುತ್ತಿದೆ.ಆರೋಪಿಗಳು ಕೊಲೆ ಮಾಡಿದ ಬಳಿಕ ಪಿಎಸ್‌ಐಗೆ ಹಣದ ಆಮಿಷ ಒಡ್ಡಿ ಸಹಾಯ ಮಾಡಲು ಕರೆ ಮಾಡಿದ್ದರು ಎನ್ನಲಾಗಿದೆ. ಆದರೆ, ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಆರೋಪಗಳನ್ನು ನಿರಾಕರಿಸಿದ್ದಾರೆ.ಈ ಬಗ್ಗೆ ಬುಧವಾರದಂದು ಪರಿಶೀಲನೆ ನಡೆಸಲಾಗಿದೆ. ಈ ಆರೋಪ ಆಧಾರರಹಿತವೆಂದು ಕಂಡುಬಂದಿದೆ. ಮೃತದೇಹ ಪತ್ತೆಯಾಗುವವರೆಗೂ ಪೊಲೀಸ್ ಠಾಣೆಯ ಯಾವುದೇ ಪಿಎಸ್‌ಐಗೆ ಕೊಲೆಯ ಬಗ್ಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.